ಮಿಂಚಿ ಮರೆಯಾದ ಮಿಂಚಿನ ಓಟದ ಶಂಕರ್ ನಾಗ್
ನ.9 ಶಂಕರ್ ನಾಗ್ ಜನ್ಮದಿನ. ಶಂಕರ್ ಎಲ್ಲ ವರ್ಗದ ಜನರ ಮನಗೆದ್ದ ಸ್ಟೈಲ್ಕಿಂಗ್
ನ.9 ಶಂಕರ್ ನಾಗ್ ಜನ್ಮದಿನ. ಶಂಕರ್ ಎಲ್ಲ ವರ್ಗದ ಜನರ ಮನಗೆದ್ದ ಸ್ಟೈಲ್ಕಿಂಗ್
‘ಒಂದಾನೊಂದು ಕಾಲದಿಂದ’ ಚಿತ್ರರಂಗಕ್ಕೆ ಕಾಲಿಟ್ಟು ‘ಮಿಂಚಿನ ಓಟ’ದಿಂದ ಕನ್ನಡ ಚಿತ್ರರಂಗದಲ್ಲಿ ಭದ್ರವಾಗಿ ನೆಲೆಯೂರಿದ್ದ ಮಹಾನ್ ನಟ ಶಂಕರ್ ನಾಗ್. ಶಂಕರ್ ಬಾಲ್ಕನ್ನಿಯಿಂದ ಗಾಂಧಿ ಕ್ಲಾಸಿನವರೆಗಿನ ಎಲ್ಲ ವರ್ಗದ ಪ್ರೇಕ್ಷಕರ ಮನಗೆದ್ದ ಮೇರುನಟ.
ನಾಟಕವಿರಲಿ, ಸಿನಿಮಾನೇ ಇರಲಿ ಅದರಲ್ಲಿ ಹೊಸತನ ಬಿಂಬಿಸಲು ಶ್ರಮಿಸುತ್ತಿದ್ದ ಶಂಕರ್ ನಾಗ್, ತಮ್ಮ ವಿಶಿಷ್ಟ ಶೈಲಿಯ ಡೈಲಾಗ್ ಡೆಲೆವರಿ, ಕರಾಟೆ ಸ್ಟೈಲ್ನಿಂದ ಬಹುಬೇಗ ಉತ್ತುಂಗಕ್ಕೇರಿದರು, ಕೋಟ್ಯಂತರ ಕನ್ನಡಾಭಿಮಾನಿಗಳ ಹೃದಯ ಸಿಂಹಾಸನಾಶ್ವರರಾದರು.
ಸಾಂಗ್ಲಿಯಾನ ಭಾಗ ೧, ೨, ಸಿಬಿಐ ಶಂಕರ್, ಮಿಂಚಿನ ಓಟ, ಒಂದು ಮುತ್ತಿನ ಕತೆ, ಸೀತಾರಾಮು, ರಕ್ತ ತಿಲಕ, ನರಸಿಂಹ, ನ್ಯಾಯ ಎಲ್ಲಿದೆ, ಆಟೋರಾಜ, ಗೀತಾ, ನೋಡಿ ಸ್ವಾಮಿ ನಾವಿರೋದೇ , ಭರ್ಜರಿ ಬೇಟೆ, ಕಾರ್ಮಿಕ ಕಳ್ಳನಲ್ಲ, ಗೆದ್ದಮಗ, ಪುಂಡ ಪ್ರಚಂಡರು, .. ಹೀಗೆ ಹಲವು ಹತ್ತು ಚಿತ್ರಗಳಲ್ಲಿ ನಟಿಸಿದ ಶಂಕರ್ ನಾಗ್, ಕನ್ನಡದ ಮೇರುನಟ ಡಾ. ರಾಜ್ ಅಭಿನಯದ ಒಂದು ಮುತ್ತಿನ ಕತೆ ಸೇರಿದಂತೆ ಹಲವು ಚಿತ್ರಗಳನ್ನು ನಿರ್ದೇಶಿಸಿದ್ದರು ಕೂಡ.
ಶಂಕರ್ ನಾಗ್ ಸತ್ತು 18 ವರ್ಷಗಳೇ ಉರುಳಿದ್ದರೂ ಅವರ ನೆನಪು ಸದಾ ಹಸಿರು. ಇಂದಿಗೂ ಬೆಂಗಳೂರು, ಮಂಗಳೂರು, ಮೈಸೂರು ಮೊದಲಾದೆಡೆ ಆಟೋಗಳ ಮೇಲೆ ಶಂಕರ್ ನಾಗ್ ಭಾವಚಿತ್ರಗಳನ್ನು ನಾವು ನೋಡಬಹುದು. ಆಟೋ ಚಾಲಕರು ತಮ್ಮ ವೃತ್ತಿಯನ್ನು ಗೌರವಪೂರ್ವಕವಾಗಿ ‘ಆಟೋರಾಜ’ ಚಿತ್ರದಲ್ಲಿ ಬಿಂಬಿಸಿದ ಶಂಕರ್ರನ್ನು ಹೃದಯದಲ್ಲಿಟ್ಟು ಪೂಜಿಸುತ್ತಾರೆ. ಶಂಕರ್ ನಾಗ್ ಅಭಿನಯದ ಹಿಟ್ ಚಿತ್ರ ‘ಗೀತಾ’ದ ಎಲ್ಲ ಹಾಡುಗಳೂ ಇಂದಿಗೂ ಅತ್ಯಂತ ಜನಪ್ರಿಯ. ಜನರೇಷನ್ ಯಾವುದೇ ಇರಲಿ ಎಲ್ಲರಿಗೂ ಪ್ರಿಯವಾಗುವಂಥ ಟ್ಯೂನ್ ಅನ್ನು ಹಲವು ದಶಕಗಳ ಹಿಂದೆಯೇ ನೀಡಿದ ಖ್ಯಾತಿ ಕೀರ್ತಿ ಶಂಕರ್ ನಾಗ್ ಗೆ ಸಲ್ಲುತ್ತದೆ. ಆಬಾಲವೃದ್ಧರಾದಿಯಾಗಿ ಎಲ್ಲರ ಮನಗೆಲ್ಲುವ ಈ ಗೀತೆಗಳು ಇಂದಿಗೂ ಎಲ್ಲ ರಸಮಂಜರಿ ಕಾರ್ಯಕ್ರಮಗಳಲ್ಲಿ , ಎಫ್.ಎಂ. ರೇಡಿಯೋಗಳಲ್ಲಿ, ಟಿ.ವಿ. ವಾಹಿನಿಗಳಲ್ಲಿ ಈ ಚಿತ್ರದ ಗೀತೆಗಳು ರಾರಾಜಿಸುತ್ತಿವೆ.
ಸದಾ ಆಧುನಿಕತೆಯ ಸದ್ಬಳಕೆಯ ಬಗ್ಗೆ ಮಾತನಾಡುತ್ತಿದ್ದ ಶಂಕರ್ ನಾಗ್ 1980ರ ದಶಕಾಂತ್ಯದಲ್ಲೇ ಕಂಪ್ಯೂಟರ್, ಲ್ಯಾಪ್ಟಾಪ್ ಬಳಸುತ್ತಿದ್ದರು. ಚಿತ್ರರಂಗದಲ್ಲಿ ಕೂಡ ಆಧುನಿಕ ತಂತ್ರಜ್ಞಾನ, ಗ್ರಾಫಿಕ್ಸ್ ಬಳಸಿ ಪ್ರೇಕ್ಷಕರನ್ನು ರಂಜಿಸಲು ಹಾತೊರೆಯುತ್ತಿದ್ದರು. ಸಂಕೇತ್ ಸ್ಟುಡಿಯೋ ಹುಟ್ಟು ಹಾಕಿದರು. ಶಂಕರ್ ನಾಗ್ ದೆಹಲಿ ದೂರದರ್ಶನಕ್ಕಾಗಿ ತಯಾರಿಸಿದ ಖ್ಯಾತ ಲೇಖಕ ಆರ್.ಕೆ. ನಾರಾಯಣ್ ಅವರ ಮಾಲ್ಗುಡಿ ಡೇಸ್ ಅವರಿಗೆ ರಾಷ್ಟ್ರಖ್ಯಾತಿ ತಂದುಕೊಟ್ಟಿತು.
ಇಷ್ಟೆಲ್ಲಾ ಖ್ಯಾತಿ, ಕೀರ್ತಿ ಇದ್ದರೂ ಶಂಕರ್ನಾಗ್ಗೆ ಚಿತ್ರರಂಗಕ್ಕಿಂತ, ರಂಗಭೂಮಿಯತ್ತಲೇ ಹೆಚ್ಚಿನ ಆಸಕ್ತಿ. ನಾಗಮಂಡಲ, ನೋಡಿ ಸ್ವಾಮಿ ನಾವಿರೋದೆ ಹೀಗೆ, ಜೋಕುಮಾರಸ್ವಾಮಿ ನಾಟಕಗಳಲ್ಲಿ ಅಭಿನಯಿಸಿ ನಿರ್ದೇಶಿಸುತ್ತಿದ್ದ ಶಂಕರ್ ನಾಗ್ ರಂಗಭೂಮಿಗೂ ಹೊಸ ಆಯಾಮ ನೀಡಿದರು. ತಮ್ಮ ನಾಗಮಂಡಲ ನಾಟಕದಲ್ಲಿ ಬೊಂಬೆಯಾಟವನ್ನು ಸಮರ್ಥವಾಗಿ ಬಳಸಿಕೊಳ್ಳುವ ಮೂಲಕ ಜನಮನಗೆದ್ದರು. ರಂಗಭೂಮಿಗೆ, ಕನ್ನಡ ಚಿತ್ರರಂಗಕ್ಕೆ ಅವರು ನೀಡಿದ ಕೊಡುಗೆ ಅನುಪಮ.
ಒಂದು ಮುತ್ತಿನ ಕಥೆ, ಆಕ್ಸಿಡೆಂಟ್ ಚಿತ್ರಗಳಿಗೆ ರಾಷ್ಟ್ರ ಪ್ರಶಸ್ತಿಯನ್ನೂ ಪಡೆದಿದ್ದ ಶಂಕರ್ ನಾಗ್, ಕೊನೆ ಕಂಡಿದ್ದೂ ಆಕ್ಸಿಡೆಂಟ್ನಲ್ಲೇ. ಜೋಕುಮಾರ ಸ್ವಾಮಿ ಚಿತ್ರದ ಚಿತ್ರೀಕರಣಕ್ಕಾಗಿ ತೆರಳುತ್ತಿದ್ದ ಶಂಕರ್ ನಾಗ್ ದಾವಣಗೆರೆ ಬಳಿ 1990ರ ಸೆಪ್ಟೆಂಬರ್ 29ರ ಮಧ್ಯರಾತ್ರಿ ರಸ್ತೆ ಅಪಘಾತದಲ್ಲಿ ಅಸುನೀಗಿದರು. ಶಂಕರ್ ನಾಗ್ ಇಂದು ನಮ್ಮೊಂದಿಗಿಲ್ಲ. ಆದರೆ ಶಂಕರ್ ಮಹತ್ವಾಕಾಂಕ್ಷೆಯ ಥಿಯೇಟರ್ 'ರಂಗಶಂಕರ' ಬೆಂಗಳೂರಿನಲ್ಲಿ ಸಾಕಾರಗೊಂಡಿದೆ. ಈ ಹೊತ್ತು ರಂಗಶಂಕರದಲ್ಲಿ ರಂಗಭೂಮಿ ಕಲೆಗೆ ಹೊಸ ಆಯಾಮ ನೀಡುವ ಕಾರ್ಯ ನಿರಂತರವಾಗಿ ಸಾಗಿದೆ.
కామెంట్లు లేవు:
కామెంట్ను పోస్ట్ చేయండి