LORD SRIVENKATESWARA THIRUPATHI
ಆಂಧ್ರಪ್ರದೇಶದಲ್ಲಿರುವ ತಿರುಮಲೆಯಲ್ಲಿ ಲಕ್ಷ್ಮೀ, ಪದ್ಮಾವತಿ ಸಹಿತ ನೆಲೆಸಿರುವ ಏಳು ಬೆಟ್ಟಗಳ ಒಡೆಯ ವೆಂಕಟೇಶ್ವರ ಕಲಿಯುಗದ ಕಾಮಧೇನು. ಬೇಡಿ ಬರುವ ಭಕ್ತರ ಕಷ್ಟಗಳನ್ನು ನಿವಾರಿಸಿ, ಸುಖ, ಸೌಭಾಗ್ಯ ಕರುಣಿಸುತ್ತಿರುವ ಶ್ರೀನಿವಾಸ ನೆಲೆಸಿಹ ಈ ಕ್ಷೇತ್ರ ಭೂವೈಕುಂಠವೆಂದೇ ಖ್ಯಾತವಾಗಿದೆ.
ಎಲ್ಲ ದೇವಾಲಯಗಳಲ್ಲಿ ವರ್ಷಕ್ಕೊಮ್ಮೆ ಜಾತ್ರೆ ನಡೆದರೆ ಇಲ್ಲಿ ನಿತ್ಯಜಾತ್ರೆ. ದಿನವೂ ದೇಶದ ನಾನಾ ಭಾಗಗಳಿಂದ ಭಕ್ತಸಾಗರವೇ ಹರಿದುಬರುತ್ತದೆ.
ತಿರುಪತಿ ಗಿರಿವಾಸ ಶ್ರೀ ವೆಂಕಟೇಶ, ನೀನೊಲಿದ ಮನೆ ಮನೆಯು ಲಕ್ಷ್ಮೀ ನಿವಾಸ.. ಎಂದು ಭಕ್ತರು ಹಾಡಿ ಹೊಗಳಿದ್ದಾರೆ. ಗೋವಿಂದನ ಕೃಪೆಯೊಂದಿದ್ದರೆ ಬದುಕು ಬಂಗಾರ ಎಂಬುದು ನಂಬಿಕೆ. ವೆಂಕಟೇಶ್ವರನ ಸನ್ನಿಧಿಗೆ ಬಂದ ಭಕ್ತರು ಉತ್ತರೋತ್ತರ ಅಭಿವೃದ್ಧಿಯನ್ನು ಹೊಂದಿ, ತಮ್ಮ ಕೃತಜ್ಞತೆಯ ಸಂಕೇತವಾಗಿ ಕೋಟ್ಯಂತರ ರೂಪಾಯಿ ಆಭರಣಗಳನ್ನು ತಿಮ್ಮಪ್ಪನಿಗೆ ಕಾಣಿಕೆಯಾಗಿ ನೀಡುತ್ತಿದ್ದಾರೆ.
ಪವಿತ್ರ ತಿರುಮಲೆಯಲ್ಲಿ ಇರುವ ಭವ್ಯ ದೇವಾಲಯದಲ್ಲಿ ವೆಂಕಟೇಶ್ವರ ವಿರಾಜಮಾನನಾಗಿದ್ದಾನೆ. ಈ ದೇವಾಲಯದ ಇತಿಹಾಸ ಇಂದು ನಿನ್ನೆಯದಲ್ಲ. ವೇದ-ಪುರಾಣ ಕಾಲದಿಂದಲೂ ಈ ಭೂಮಿ ಪವಿತ್ರ ಪುಣ್ಯಕ್ಷೇತ್ರವೆನಿಸಿದೆ.
ಐತಿಹ್ಯ : ತಿರುಮಲ ಒಂದು ಕಾಲದಲ್ಲಿ ಮೇರುಪರ್ವತವಾಗಿತ್ತು. ಒಮ್ಮೆ ಆದಿಶೇಷನಿಗೂ ವಾಯುದೇವನಿಗೂ ನಡೆದ ಹೋರಾಟದಲ್ಲಿ ಪರ್ವತ ಎರಡು ಹೋಳಾಯಿತು. ಅದರಲ್ಲೊಂದು ಭಾಗ ಭೂಮಿಗೆ ಬಿತ್ತು. ಅದುವೇ ತಿರುಮಲ. ಇಲ್ಲಿ ವೆಂಕಟೇಶ್ವರ ನೆಲೆಸಿದ ಮೇಲೆ ಇದು ವಿಷ್ಣುಕ್ಷೇತ್ರವಾಯ್ತು. ಇಲ್ಲಿರುವ ವೆಂಕಟೇಶ್ವರನ ವಿಗ್ರಹ ಶಿಲ್ಪಿ ಕೆತ್ತಿದ್ದಲ್ಲ. ಭೂಮಿಯಲ್ಲಿ ಶ್ರೀನಿವಾಸನಾಗಿ ಹುಟ್ಟಿದ ಮಹಾವಿಷ್ಣು ಸ್ವಯಂ ಶಿಲೆಯಾಗಿ ಇಲ್ಲಿ ನೆಲೆಸಿದ್ದಾನೆ ಎನ್ನುತ್ತದೆ ವೆಂಕಟಾಚಲ ಮಹಾತ್ಮೆ.
ಶ್ರೀನಿವಾಸ ಕಲ್ಯಾಣ : ದ್ವಾಪರಯುಗದಲ್ಲಿ ಶ್ರೀರಾಮನನ್ನು ವಿವಾಹವಾಗಲು ಇಚ್ಛಿಸಿದ ವೇದವತಿಗೆ ಶ್ರೀರಾಮ, ತಾನು ಏಕಪತ್ನೀ ವ್ರತಸ್ಥನಾದ ಕಾರಣ ಕಲಿಯುಗದಲ್ಲಿ ನಿನ್ನ ಇಚ್ಛೆ ಪೂರೈಸುವೆ ಎಂದು ವರ ನೀಡುತ್ತಾನೆ. ಕೊಟ್ಟ ಭಾಷೆ ಈಡೇರಿಸಲು, ಕಲಿಯುಗದಲ್ಲಿ ಶ್ರೀನಿವಾಸನಾಗಿ ಅವತಾರ ಎತ್ತುತ್ತಾನೆ. ಭೃಗು ಮಹರ್ಷಿಗಳು ಮಹಾವಿಷ್ಣುವಿನ ವಕ್ಷಸ್ಥಳಕ್ಕೆ ಒದ್ದಾಗ, ತನ್ನ ವಾಸಸ್ಥಾನಕ್ಕೆ ಆದ ಅವಮಾನ ಸಹಿಸಲಾರದೆ ಲಕ್ಷ್ಮೀ ಕರವೀರಪುರದಲ್ಲಿ ಬಂದು ನೆಲೆಸುತ್ತಾಳೆ. ಲಕ್ಷ್ಮಿಯನ್ನು ಹುಡುಕುತ್ತಾ ಭೂಮಿಗೆ ಬರುವ ಮಹಾವಿಷ್ಣು ಭೂಸ್ಪರ್ಶದಿಂದ ಸಾಮಾನ್ಯ ಮಾನವನಾಗುತ್ತಾನೆ. ಬಕುಳಾದೇವಿಯ ಸಾಕು ಮಗನಾಗಿ ಆಶ್ರಮ ಸೇರುತ್ತಾನೆ. ಬೇಟೆಗೆ ಹೋದಾಗ ಪದ್ಮಾವತಿಯಲ್ಲಿ ಅನುರಕ್ತನಾಗುತ್ತಾನೆ. ಸಪ್ತಋಷಿಗಳ ಸಂಧಾನದ ಫಲವಾಗಿ ಪದ್ಮಾವತಿ-ಶ್ರೀನಿವಾಸರ ಕಲ್ಯಾಣ ನಿಶ್ಚಯವಾಗುತ್ತದೆ. ಆಗ ಕುಬೇರನಿಂದ ಸಾಲ ಪಡೆಯುವ ಶ್ರೀನಿವಾಸ, ಕಲಿಯುಗ ಪರ್ಯಂತ ಸಾಲ ತೀರಿಸಲು ಇಲ್ಲಿ ಶಿಲೆಯಾಗಿ ನಿಲ್ಲುತ್ತಾನೆ.
ಇಲ್ಲಿರುವ ಪುರಾತನ ದೇವಸ್ಥಾನ ಪಲ್ಲವ ವಾಸ್ತು ಶೈಲಿಯಲ್ಲಿದೆ. ಗೋಪುರ ಪೂರ್ವಾಭಿಮುಖವಾಗಿದೆ. ಗರ್ಭಗುಡಿಯ ಮೇಲಣ ವಿಮಾನ ಗೋಪುರಕ್ಕೆ ಚಿನ್ನದ ತಗಡಿನ ಅಲಂಕಾರ ಮಾಡಲಾಗಿದೆ.
ಮೂಲವಿಗ್ರಹ ಹರಿ -ಹರ ಪ್ರತೀಕವಾಗಿದ್ದು, ಶೈವ- ವೈಷ್ಣವರ ಸೌಹಾರ್ದಕ್ಕೆ ಸಾಕ್ಷಿಯಾಗಿದೆ. ಹೀಗಾಗೇ ವೆಂಕಟನಾಥ ಇಲ್ಲಿ ವೆಂಕಟೇಶ್ವರನಾಗಿದ್ದಾನೆ.
ಶಂಖ, ಚಕ್ರಧಾರಿಯಾದ ಚತುರ್ಭುಜ ವೆಂಕಟೇಶ ಒಂದು ಕೈಯನ್ನು ಸೊಂಟದ ಮೇಲಿಟ್ಟುಕೊಂಡಿದ್ದರೆ, ಮತ್ತೊಂದು ಕೈ ಇನ್ನೊಂದು ಅಭಯಮುದ್ರೆಯಲ್ಲಿದೆ. ಇಲ್ಲಿ ನಡೆವ ಉತ್ಸವಗಳಲ್ಲಿ ಭಾದ್ರಪದ ಮಾಸದಲ್ಲಿ ಒಂಬತ್ತು ದಿನ ನಡೆಯುವ ಬ್ರಹ್ಮೋತ್ಸವ ಬಹು ಮುಖ್ಯವಾದದ್ದು. ಪ್ರತಿ ಮೂರು ವರ್ಷಗಳಿಗೊಮ್ಮೆ ನವರಾತ್ರಿಯಲ್ಲಿ ಶ್ರೀವಾರಿ ಬ್ರಹ್ಮೊತ್ಸವ ನಡೆಯುತ್ತವೆ. ಇಲ್ಲಿಗೆ ಬರುವ ಹರಕೆ ಹೊತ್ತ ಭಕ್ತರು ತಮ್ಮ ಮುಡಿ ಅರ್ಪಿಸಿ ಕೃತಜ್ಞತೆ ಸಲ್ಲಿಸುತ್ತಾರೆ.
ಕಾಂಚೀಪುರದ ಪಲ್ಲವರು, ತಂಜಾವೂರಿನ ಚೋಳರು, ಮದುರೆಯ ಪಾಂಡ್ಯರು, ವಿಜಯ ನಗರದ ಅರಸರು, ಮರಾಠರು, ವೆಂಕಟೇಶ್ವರನ ಭಕ್ತರಾಗಿ ಈ ದೇವಾಲಯಕ್ಕೆ ಹಲವು ಕಾಣಿಕೆ ನೀಡಿದ್ದಾರೆ. ಶ್ರೀಕೃಷ್ಣದೇವರಾಯರ ಕಾಲದಲ್ಲಿ ಈ ದೇವಾಲಯ ಅಭಿವೃದ್ಧಿ ಹೊಂದಿದೆ ಎಂಬುದಕ್ಕೆ ಸಾಕ್ಷಿಯಾಗಿ, ಶ್ರೀಕೃಷ್ಣದೇವರಾಯರ ಭಕ್ತ ವಿಗ್ರಹ ಇಲ್ಲಿದೆ.
1933ರಲ್ಲಿ ಅಂದಿನ ಮೈಸೂರು ಸರ್ಕಾರ ವಿಶೇಷ ಕಾಯಿದೆ ತಂದು ದೇವಸ್ಥಾನದ ಆಡಳಿತ ನಿರ್ವಹಣೆಯನ್ನು ತಿರುಮಲ ತಿರುಪತಿ ದೇವಸ್ಥಾನ ಸಮಿತಿಗೆ ವಹಿಸಿತು. 1987ರಲ್ಲಿ ಆಂಧ್ರಪ್ರದೇಶ ಸರ್ಕಾರ ಇದಕ್ಕೆ ಟ್ರಸ್ಟಿಗಳ ಮಂಡಳಿ ರಚಿಸಿದೆ. ಟಿಟಿಡಿ ಟ್ರಸ್ಟ್ ದೇವಾಲಯದ ಸರ್ವಾಂಗೀಣ ಅಭಿವೃದ್ಧಿಯ ಜೊತೆಗೆ, ಶೈಕ್ಷಿಣಿಕ, ಸಾಮಾಜಿಕ ಕಾರ್ಯಗಳನ್ನೂ ಮಾಡುತ್ತಿದೆ.
ಸುತ್ತಮುತ್ತಲ ಪುಣ್ಯಕ್ಷೇತ್ರಗಳು : ಸ್ವಾಮಿಪುಷ್ಕರಿಣಿ, ಆಕಾಶಗಂಗೆ, ಪಾಪವಿನಾಶನಂ, ತುಂಬುರುತೀರ್ಥ, ಅಷ್ಠಾನ ಮಂಟಪ, ವೆಂಕಟೇಶ್ವರ ಧ್ಯಾನ ಜ್ಞಾನ ಮಂದಿರ – ವಸ್ತು ಸಂಗ್ರಹಾಲಯ.
ತಿರುಪತಿಗೆ 12 ಕಿಲೋ ಮೀಟರ್ ದೂರದಲ್ಲಿ ಮಂಗಪುರಂನಲ್ಲಿ ಅಲಮೇಲು ಅಮ್ಮನವರ ಗುಡಿ ಇದೆ. ತಿರುಪತಿಯಿಂದ ಮೂರು ಕಿಲೋ ಮೀಟರ್ ದೂರದಲ್ಲಿ ಕಪಿಲ ಮಹರ್ಷಿಗಳು ಪ್ರತಿಷ್ಠಾಪಿಸಿದ ಕಪಿಲೇಶ್ವರ ದೇವಾಲಯವಿದೆ. ಬೆಟ್ಟದ ಕೆಳಗೆ ವರದರಾಜಸ್ವಾಮಿ ದೇವಾಲಯವಿದೆ. ಬೆಟ್ಟದ ಮೇಲೆ ಹಾಗೂ ಕೆಳಗೆ ಉಳಿದುಕೊಳ್ಳಲು ಟ್ರಸ್ಟ್ ನ ಛತ್ರ, ವಸತಿಗೃಹಗಳು ಹಾಗೂ ಅನೇಕ ಹೋಟೆಲ್ ಗಳಿವೆ.
ರೈಲು ಮತ್ತು ಬಸ್ ಸೌಕರ್ಯ ಉತ್ತಮವಾಗಿದೆ. ಕಂಚಿ ಹಾಗೂ ಕಾ
కామెంట్లు లేవు:
కామెంట్ను పోస్ట్ చేయండి